ವಿಕಾಸದ ಹಾದಿ ವಿನಾಶದೆಡೆಗೆ-ಸಾಕ್ಷಿಯಾಗಿ ನಿಲ್ಲು ಮನವೇ..!!

    ವಿಕಾಸ ವಿಕಸನದ ಒಂದು ರೂಪ. ವಿಕಾಸ ಎನ್ನುವುದು ಬೆಳೆಯುತ್ತಾ ಬೆಳೆಯುತ್ತಾ ತನ್ನ ಮೂಲಸ್ಥಿತಿಗೆ ಹೋಗಲಾರದ ಸ್ಥಿತಿ. ವಿಕಾಸ ವಿಶ್ವ ರಚನೆಯಲ್ಲಿ ಅಡಗಿದ ಸತ್ಯ. ಈವರೆಗೆ ಯಾವ ದಾರ್ಶನಿಕನಿಗೂ ಸಿಗದೇ ಹೋದ ಸತ್ಯ. ವಿಕಾಸ ವಿಶ್ವದಗಲ ವಿಶ್ವವ್ಯಾಪಕತ್ವದ ವಿಶಾಲತೆಯ ಪರಿಮಿತಿ ಇಲ್ಲದ ಸ್ಥಿತಿ. ಈ ವಿಕಾಸ ವಿಶ್ವವ್ಯಾಪ್ತಿಯಾಗಿ, ದೇಶವ್ಯಾಪ್ತಿ, ರಾಜ್ಯ, ಹಳ್ಳಿ, ಪಟ್ಟಣವೆನ್ನದೇ ವಿಕಾಸ ಹರಡಿಕೊಂಡಿದೆ.




    ವಿಕಾಸ ಜನರನ್ನು ಬಿಟ್ಟಿಲ್ಲ. ಜನರೆಲ್ಲ ವಿಕಾಸದ ಹಾದಿಯಲ್ಲಿ ಬಂದು ಈಗ ಮತ್ತೆ ವಿಕಾಸದ ಕಡೆಗೆ ಸಾಗುತ್ತಲೇ ಇದ್ದೇವೆ. ಈ ವಿಕಾಸಕ್ಕೆ ಸ್ಪಷ್ಟ ಆಕಾರ ಇರಲೇಬೇಕು ಎಂದೇನೂ ಇಲ್ಲ. ಆಕಾರಗಳು ಬದಲಾಗುತ್ತಾ ಸಾಗುವುದೇ ವಿಕಾಸ.

    ಮನುಕುಲದ ಪ್ರಾರಂಭಕ್ಕೆ ಹೋದರೆ ಕಾಡುಗಳಲ್ಲಿ ವಾಸವಾಗಿದ್ದ, ಪ್ರಾಣಿಗಳ ಭೇಟೆಯಾಡಿ ಬದುಕುತ್ತಿದ್ದ. ನಂತರ ಕೃಷಿಕನಾದ, ವ್ಯಾಪಾರಿಯಾದ, ನಾನು, ನನ್ನದು ಎಂಬ ಭೂತಕ್ಕೆ ಶರಣಗತನಾಗಿ ಹೊಸ ಹೊಸ ವಿಕಾಸಗಳಲ್ಲಿ ವಿಜೃಂಬಿಸತೊಡಗಿದ.

    ಈಗ ವಿಕಾಸ ಎತ್ತ ಸಾಗುತ್ತಿದೆ ಎಂದುಕೊ0ಡರೆ ವಿಕಾಸ-ವಿಕಾರ ರೂಪವಾಗಿ ವಿಶ್ವವ್ಯಾಪಿಯಾಗಿದೆ. ಈ ವಿಕಾಸದ ಅಭಿಪ್ರಾಯಗಳೆ ಹಾಗೆ,  ವಿಕಾಸದ ಇನ್ನೊಂದು ರೂಪವಾದ ವಿಕಸನದ ಪರಿಣಾಮ. ಒಂದು-ಎರಡಾಗಿ, ಎರಡು ನಾಲ್ಕಾಗಿ, ನಾಲ್ಕು ಎಂಟು, ಹದಿನಾರು ಹೀಗೆ ವಿಕಾಸ ವಿಕಸನದ ಪರಿಣಾಮಗಳಲ್ಲಿ ಮೂಲ ಸ್ಥಿತಿಯಿಂದ ಬೆಳೆಯುತ್ತಾ ಮತ್ತೆ ಮೂಲ ಸ್ಥಿತಿಗೆ ಬರಲಾಗದ ಸ್ಥಿತಿಯಲ್ಲಿ ನಿಲ್ಲುತ್ತದೆ.

    ವಿಕಾಸ ಎನ್ನುವುದು ವಿಕಾರವಾಗಿ ಬೆಳೆಯುತ್ತಾ ಹೋದಂತೆ  ಅದು ವಿಸ್ತಾರವಾಗುತ್ತದೆ. ಆಕಾರವಾಗಿ ಬೆಳೆದಿಲ್ಲ ಎಂದು ನಮಗೆ ತಿಳುವಳಿಕೆಗೆ ಬಂದರೂ, ಈ ವಿಕಾಸದ ಪರಿಣಾಮವನ್ನು ಸುವ್ಯವಸ್ಥಿತವಾಗಿ ಉತ್ತಮ ಆಕಾರವಾಗಿಸಲು ಪ್ರಯತ್ನಿಸಿದರೂ ಅದು ಮತ್ತೆ ಮತ್ತೆ ನಮ್ಮ ನಿಯಂತ್ರಣ ತಪ್ಪಿ ವಿಕಾರತೆಯನ್ನೇ ಪಡೆದುಕೊಳ್ಳುತ್ತದೆ. ಅದನ್ನೇ ವಿಕಸನ ಪರಿಣಾಮ ಎನ್ನಬಹುದು.

    ಒಂದು ಪರಮಾಣು ಅಸ್ತçಪ್ರಯೋಗ ವಿಕಾಸದ ಪರಿಣಾಮ. ಅದು ಅಪಾಯಕಾರಿ ಎಂದು ತಿಳಿದರೂ ಅದು ಎಲ್ಲಾ ದೇಶಗಳಿಗೂ ಬೇಕು ಎನ್ನಿಸುತ್ತದೆ. ಮತ್ತು ಅದರ ಪರಿಣಾಮ ಅಪಾಯ ಎಂದು ತಿಳಿದಿದ್ದರೂ ಅದನ್ನು ಪ್ರಯೋಗಿಸಿದರೆ ಅದರ ಪರಿಣಾಮವನ್ನು ತಡೆಯುವ ಶಕ್ತಿ ಇಲ್ಲದಿದ್ದರೂ ಅದೇ ಎಲ್ಲಾ ದೇಶಗಳಿಗೂ ಬೇಕಾಗಿದೆ. ಹೀಗೆಯೇ ಯಾವುದು ಅಪಾಯ ಎಂದುಕೊಳ್ಳುತ್ತೇವೆಯೋ ಅದೇ ನಮಗೆ ಬೇಕು ಎನ್ನಿಸುವುದೇ ವಿಕಾಸದ ಪರಿಣಾಮ ತತ್ವ ಎನ್ನಬಹುದು.

    ನಮ್ಮ ಜಗತ್ತು  ಈಗ ವಿಕಾಸದ ಹಾದಿಯಲ್ಲಿ ಬಹು ದೂರ ಕ್ರಮಿಸಿ ಬಂದಿದೆ. ೪೫೪ ಕೋಟಿ ವರ್ಷಗಳ ಹಿಂದೆ ರಚನೆಯಾಗಿತ್ತು ಎನ್ನಲಾದ ಭೂಮಿ ತನ್ನ ರಚನೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಬಂದಿದೆ. ಈ ಬದಲಾವಣೆಯ ಪರಿಣಾಮ ಭೂಮಿಯ ಚಲನೆಯೊಂದಿಗೆ ನಾವು ಬದಲಾಗಿದ್ದೇವೆ.

    ಒಂದು ಮಗು ಹುಟ್ಟಿದ ಮೇಲೆ ಬೆಳೆಯುತ್ತಾ ಬೆಳೆಯುತ್ತಾ ಯುವಕನಾಗಿ-ಯುವತಿಯಾಗಿ ಮುಂದೆ ಸಾವಿನ ಕಡೆ ಚಲಿಸಿದಂತೆ ನಮ್ಮ ವಿಕಾಸದ ಹಾದಿ ಹುಟ್ಟಿನಿಂದ ಸಾವಿನೆಡೆಗೆ ಆದಂತೆ ಇಡಿ ಪ್ರಪಂಚ ವ್ಯವಸ್ಥೆ ಇದೆ. ಇಲ್ಲಿ ಯಾರು ಸಹ ನಾನು ಯುವಕನಾದ ಮೇಲೆ ಮತ್ತೆ ಮಗುವಾಗಿ ಆನಂದಿಸಬೇಕು ಎಂದರೆ ಹೀಗೆ ಹಿಂದಕ್ಕೆ (ವಯಸ್ಸಿನಲ್ಲಿ) ಹೋಗಲಾಗುವುದಿಲ್ಲವೋ ಹಾಗೆ ವಿಕಾಸದ ಹಾದಿ ಮುಂದೆ ಮುಂದೆಕ್ಕೆ ಹೋದಂತೆ ಹಿಂದಿನ ಬದುಕು ಮತ್ತೆ ಸಿಗಲಾಗದ, ಪಡೆಯಲಾಗದ ಸ್ಥಿತಿ, ಇಂತಹ ಸ್ಥಿತಿಯಲ್ಲಿಯೇ ಇಡೀ ಭೂಮಂಡಲ ಸೂರ್ಯ-ಚಂದ್ರ-ಎಲ್ಲಾ ಗ್ರಹಗಳು ಇವೆ. ಅದೇ ರೀತಿ  ನಮ್ಮ ಮನೆ ಮನಸ್ಸುಗಳು ಇದ್ದಾವೆ. ಇತ್ತೀಚೆಗಿನ ವಿದ್ಯಮಾನಗಳನ್ನು ಕಂಡಾಗ ನಮ್ಮ ಪ್ರಪಂಚದ ಮನುಕುಲದ ವಿಕಾಸ-ವಿಕಾರ ವಿಕಸನವಾಗಿ ಪರಮಾಣು ಅಸ್ತçದಂತೆ ಸ್ಪೋಟಕವಾಗಿ ಕಾಣಿಸುತ್ತಿದೆ.


    ಎಲ್ಲರ ಗುರಿ ಒಂದೇ ನಾನು ಎಂಬ ಪ್ರತಿಷ್ಠೆಯು ವಿಕಾಸವಾದ ಪ್ರತಿ ಕ್ಷೇತ್ರದಲ್ಲಿಯೂ ತಮ್ಮ ತಮ್ಮ ಉಳಿವುಗಳ ಹೋರಾಟಕ್ಕಾಗಿ ಬೇರೆಯವರ ಅಸ್ಥಿತ್ವಗಳನ್ನು ನಾಶ ಮಾಡುವ ಪ್ರವೃತ್ತಿ ಇಲ್ಲಿ ನಾವು ಕಾಣುತ್ತಿರುವ ವಿಕಾಸದ ಪರಿಣಾಮ ವಿನಾಶದೆಡೆಗೆ ಎಂಬ ಅಂಶ ಸ್ಪಷ್ಟವಾಗಿ ಕಾಣಿಸುತ್ತದೆ. ಹುಟ್ಟಿದ ಮನುಷ್ಯ ಸಾವಿನ ಹಾದಿಯಲ್ಲಿ ಸಾಗಿ ಸಾಯಬೇಕೇ ವಿನಃ ಹಿಂದಕ್ಕೆ ಬರಲು ಹೇಗೆ ಆಗುದಿಲ್ಲವೋ ಹಾಗೆ ಪ್ರಾಪಂಚಿಕ ವಿಕಾಸಗಳೆಲ್ಲವೂ ವಿನಾಶದ ಕಡೆಗೆ ಸಾಗುತ್ತಿದೆ. ಇದನ್ನು ನೀವು ತಿಳಿದುಕೊಳ್ಳಬೇಕಾದರೆ ನೀವು ವಿಕಾಸಕ್ಕೆ ಸಡ್ಡು ಹೊಡೆದು ನಿಂತು ನೋಡಬೇಕು.

    ವಿಕಾಸ ಎನ್ನುವುದು ನಿರಂತರ ಚಲನೆಯ ಪ್ರಕ್ರಿಯೆ ಅದರ ಮರ್ಮವನ್ನು ತಿಳಿದುಕೊಳ್ಳಲು ಅದರೊಂದಿಗೆ ಚಲಿಸುತ್ತಿದ್ದರೆ ಅಂದರೆ ಅದರೊಂದಿಗೆ ನಾವು ವಿಕಾಸದ ಹಾದಿಯಲ್ಲಿಯೇ ಚಲಿಸಿದಂತೆ ಚಲಿಸಿದರೆ ಅದರ ಮರ್ಮ ತಿಳಿಯುದಿಲ್ಲ.

    ಮೊಗ್ಗಾದ ಹೂ ಅರಳಿ ನಂತರ ಬಿದ್ದು ಹೋದಂತೆ ವಿಕಾಸದ ಪರಿಣಾಮ ಹುಟ್ಟು-ಬದುಕು- ಅಂತಿಮ ಸಾವು ಎಂಬ ತತ್ವದಲ್ಲಿಯೇ ಅಡಗಿದೆ. ಇಡೀ ಪ್ರಪಂಚಕ್ಕೆ ಅನೇಕ ಧರ್ಮಗಳನ್ನು ಬೋಧಿಸಿದ ಅನೇಕ ದಾರ್ಶನಿಕರು ಧರ್ಮ ಸಂಸ್ಥಾಪಕ ಗುರುಗಳು ಸಹ ಯಾರು ಬದುಕುಳಿದಿಲ್ಲ. ಅಂದರೆ ವಿಕಾಸ ಬುದ್ದಿ ಪೂರ್ವಕವಾಗಲಿ, ಬೌದ್ದಿಕವಾಗಲಿ, ಮಾನಸಿಕವಾಗಲಿ ಯಾವುದೇ ರೂಪದಲ್ಲಿ ಆದರೂ ಅಂತಿಮ ಎನ್ನುವುದು ವಿನಾಶವೇ ಆಗಿದೆ. ಈ ವಿನಾಶ ಒಂದೊAದು ವಿಕಾಸಕ್ಕೆ ಒಂದೊAದು  ಸಮಯ ನಿಗದಿಯಾಗಿರುತ್ತದೆ. ಮನುಷ್ಯನಿಗೆ ಆಯಸ್ಸು ಇದ್ದಂತೆ ಹೂವಿಗೆ ಕಾಯಿ, ಹಣ್ಣುಗಳಿಗೆ, ಪ್ರಾಣಿ, ಪಕ್ಷಿಗಳಿಗೆ ಎಲ್ಲರಿಗೂ ಸಮಯ ಬೇರೆಬೇರೆಯಾಗಿದೆ ಅಷ್ಟೇ.

    ಸಾವಿನಿಂದ ತಪ್ಪಿಸಿಕೊಳ್ಳಲಾಗದ ವಿವಿಧ ಧರ್ಮ ಸಂಸ್ಥಾಪಕರನ್ನು ಅಯಾಯ ಧರ್ಮದವರು ದೇವರು ಎನ್ನುವ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಅದಕ್ಕಾಗಿ ಹೊಡೆದಾಟ-ಬಡಿದಾಟ ಮಾಡುವ ಮೂರ್ಖ ಜನರ ನಡುವೆ ಬದುಕುತ್ತಿದ್ದೇವೆ.

    ಸತ್ಯದ ತಳಹದಿಯಲ್ಲಿ ವಾಸ್ತವದ ಬದುಕನ್ನು ಅರ್ಥಮಾಡಿಕೊಂಡು ತನ್ನಂತೆ ಪರರೆಂದು ತಿಳಿದುಕೊಳ್ಳದೇ ಬದುಕುಗಳಲ್ಲಿ ಪ್ರೀತಿಯನ್ನು ಹಂಚಿಕೊಳ್ಳಲಾಗದೇ ದ್ವೇಷ-ಅಸೂಯೆಗಳನ್ನು ಹಂಚಿಕೊಳ್ಳುತ್ತಾ ಸಾಗುತ್ತಿರುವ ನಾವುಗಳು ವಿಕಾಸವಾದದ  ವಿಕಸನದ  ಪರಿಣಾಮಗಳನ್ನು ಅರ್ಥ ಮಾಡದೇ ವ್ಯರ್ಥ ವಿಕೋಪಗಳಿಗೆ ಗುರಿ ಮಾಡಿಕೊಡುತ್ತಿದ್ದೇವೆ.

    ನಿಸರ್ಗ ನಿಯಮದ ಅರಿವು ಇಲ್ಲದೆ ನಾವುಗಳು ಇಡಿ ಪ್ರಪಂಚದ ದೇಶಗಳು ದೇಶದಲ್ಲಿ ಬದುಕುತ್ತಿರುವ ಜನರು ಹೀಗೆ ಎಲ್ಲರೂ ಒಂದು ಭ್ರಮೆಯಿಂದ ಇನ್ನೊಂದು ಭ್ರಮೆಗೆ ಬದಲಾಗುತ್ತಾ ವಿಕಾಸವಾದದ ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ.

    ಭೂಮಿಯ ಚಲನೆ ಸೆಕೆಂಡಿಗೆ ೩೦ಕಿ.ಮಿ. ವೇಗ, ನಿಮಿಷಕ್ಕೆ ೯೦೦ಕಿ.ಮಿ. ಒಂದು ಗಂಟೆಗೆ ೫೪೦೦೦ಕಿ.ಮಿ ವೇಗದ ಚಲನೆಯಿಂದ ನಾವು ತಪ್ಪಿಸಿಕೊಂಡು ನಮ್ಮ ಮನಸ್ಸನ್ನು ನಿಯಂತ್ರಣಕ್ಕೆ ತಂದುಕೊಡರೆ ಈ ಪ್ರಕೃತಿಯ ಎಷ್ಟೋ ರಹಸ್ಯಗಳು ನಮ್ಮ ಮನಸ್ಸಿಗೆ ಕಾಣಿಸುತ್ತವೆ. ಆದರೆ ನಮಗೆ ವಾಸ್ತವದ ಹಸಿವು ಹಣ, ಆಸೆ, ಕಾಮ ಇತರೆಗಳು ನಮ್ಮ ಮನಸ್ಸನ್ನು ನಿಲ್ಲಿಸಲಾಗದ ಸ್ಥಿತಿಯನ್ನು ತಂದುಕೊಡಿದೆ. ಈ ಸ್ಥಿತಿಯಿಂದ  ಹೊರಬರಲು ನಾವು ನಮ್ಮ ಪಂಚ ಇಂದ್ರಿಯಗಳಿಗೆ ಬೀಗ ಹಾಕಿ ಆರನೆಯ ಇಂದ್ರಿಯವನ್ನು ಜಾಗೃತ ಮಾಡಿಕೊಂಡರೆ ನಿಮಗೆ ಸುತ್ತಲಿನ ವಿದ್ಯಮಾನಗಳನ್ನು ಕಂಡು ನಗು ಬರುತ್ತದೆ, ಅಯ್ಯೋ ಅನಿಸುತ್ತದೆ.      

Post a Comment

Previous Post Next Post